Thursday, July 26, 2012

Suralu Palace

ಸುರಾಲು ಅರಮನೆ (Suralu Palace).....

ಉಡುಪಿಯಿಂದ 28 ಕಿಮೀ ದೂರದ ಸುರಾಲುವಿನಲ್ಲಿರುವ ರಾಜ್ಯದ ಏಕೈಕ ಮಣ್ಣಿನ ಅರಮನೆಯೆಂಬ ಖ್ಯಾತಿಯ ಸುರಾಲು ಮಣ್ಣಿನ ಅರಮನೆ ಈಗ ಕುಸಿಯುತ್ತಿದೆ.

ಎಕರೆ ಭೂಮಿಯ ವ್ಯಾಪ್ತಿಯನ್ನು ಹೊಂದಿರುವ ಸುರಾಲು ಅರಮನೆಯ ಹಿಂದೆ 5 ಶತಮಾನಗಳ ಇತಿಹಾಸವಿದೆ. 16 ನೇ ಶತಮಾನದ ಸುಮಾರಿಗೆ ಜೈನ ಅರಸರು ತುಳುನಾಡಿನಲ್ಲಿ ನಿರ್ಮಿಸಿದ್ದ 12 ಮಣ್ಣಿನ ಅರಮನೆಗಳಲ್ಲಿ ಉಳಿದಿರುವುದು ಈಗ ಸುರಾಲು ಮಣ್ಣಿನರಮನೆ ಮಾತ್ರ. ಹಸಿರುಗದ್ದೆಗಳ ನಡುವಿನ ಸುಂದರ ಅರಮನೆ ಈಗ ಕುಸಿಯತೊಡಗಿದ್ದು , ಅಮೂಲ್ಯ ಸ್ಮಾರಕವೊಂದು ಮಣ್ಣಾಗುವತ್ತ ದಾಪುಗಾಲಿಡುತ್ತಿದೆ.

ಪ್ರಸ್ತುತ ಯುನೆಸ್ಕೋದಲ್ಲಿರುವ ಚಿರಂಜೀವಿ ಸಿಂಗ್‌ ರಾಜ್ಯ ಪ್ರಾಚ್ಯ ವಸ್ತು ಇಲಾಖೆಯ ನಿರ್ದೇಶಕರಾಗಿದ್ದಾಗ ಅರಮನೆಯ ನವೀಕರಣ ಕಾರ್ಯ ಪ್ರಾರಂಭವಾಯಿತು. ಅಂದಾಜು ಕೋಟಿ ರುಪಾಯಿಯ ಈ ಯೋಜನೆ ಮುಕ್ಕಾಲು ವಾಸಿ ಮುಗಿದಿದ್ದರೂ, ಸರ್ಕಾರ ಈವರೆಗೆ ಹಣ ಮಂಜೂರು ಮಾಡಿರುವುದು 35 ಲಕ್ಷ ರುಪಾಯಿ ಮಾತ್ರ. 70 ಲಕ್ಷ ರುಪಾಯಿ ಕಾಮಗಾರಿ ಮುಗಿದರೂ ಸರ್ಕಾರ ಕಾಲಕಾಲಕ್ಕೆ ಸರಿಯಾಗಿ ಹಣ ಮಂಜೂರು ಮಾಡದಿರುವುದರಿಂದ ಗುತ್ತಿಗೆದಾರರು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.

ಸೋರುತಿಹುದು ಅರಮನೆಯ ಮಾಳಿಗೆ : ಅರಮನೆಯ ಮಾಡಿಗೆ ಹಂಚು ಹೊದಿಸುವ ಕೆಲಸವನ್ನು ಹಣದ ಕೊರತೆಯ ಕಾರಣವೊಡ್ಡಿ ನಿಲ್ಲಿಸಿರುವುದರಿಂದ ಸುರಾಲು ಅರಮನೆಯ ಮಾಡು ಸೋರುತ್ತಿದೆ. ಮಳೆ ನೀರಿಗೆ ಗೋಡೆಗಳು ಕುಸಿಯುತ್ತಿವೆ. ಅಪರೂಪದ ಕಾಷ್ಠಶಿಲ್ಪ ಬೂಸ್ಟು ಹಿಡಿದು ಹಾಳಾಗುತ್ತಿದೆ.

ಪೂರ್ಣವಾಗಿ ಮಣ್ಣು ಹಾಗೂ ಮರಗಳನ್ನು ಬಳಸಿ ನಿರ್ಮಿಸಿರುವುದೇ ಸುರಾಲು ಅರಮನೆಯ ವೈಶಿಷ್ಟ್ಯ. ಈ ಅರಮನೆಯನ್ನು ನಿರ್ಮಿಸಿದ್ದು , ತುಳುನಾಡಿನ ರಾಜಮನೆತನಗಳಲ್ಲಿ ಒಂದಾದ ತೋಳಾರ ವಂಶದ ಅರಸರು. ಸುರಾಲು ಅವರ ರಾಜಧಾನಿ. 1511 ರ ಹೊತ್ತಿಗೆ ನಿರ್ಮಿಸಲ್ಪಟ್ಟ ಎರಡುಪ್ಪರಿಗೆಯ ಈ ಅರಮನೆ ಸುರಾಲು ಅರಮನೆ ಎಂದೇ ಹೆಸರಾಗಿದೆ. ಸುಟ್ಟ ಆವೆ ಮಣ್ಣಿನಿಂದ ಕಟ್ಟಲಾಗಿರುವ ಗೋಡೆಗೆ ಹುಲ್ಲು ಬೆರೆಸಿದ ಗಾರೆ ಲೇಪಿಸಿದೆ. ಗಾರೆಯ ಮೇಲೆ ಸಗಣಿ ನೀರಿನ ಲೇಪನ. ಮಾಡಿನ ಹೊದಿಕೆ ನಾಡ ಹಂಚಿನದು. ಕಿಟಕಿ, ಬಾಗಿಲು, ಕಂಬ ಹಾಗೂ ಮುಚ್ಚಿಗೆಗಳಲ್ಲಿ ಕಾಷ್ಠ ಕೆತ್ತನೆಯ ವೈಭವವಿದೆ. ಅರಮನೆಯ ವಾಸ್ತುಶಿಲ್ಪ ಹಿಂದೂ- ಜೈನ ಸಂಪ್ರದಾಯ ಎರಡನ್ನೂ ಒಳಗೊಂಡಿದ್ದು. ಅರಮನೆಯಲ್ಲಿ ಪದ್ಮಾವತಿ ಹಾಗೂ ಕುಮಾರ ರಾಯನ ಮಂಚವಿದ್ದು, ಅವುಗಳಿಗೆ ಇಂದಿಗೂ ನಿತ್ಯಪೂಜೆ ಸಲ್ಲು ತ್ತಿದೆ.

ಮಾತು ತಪ್ಪಿದ ಅಯ್ಯರ್ : ಅರಮನೆಯ ವಾರಸುದಾರರು ವಿವಿಧೆಡೆಗಳಲ್ಲಿ ಹಂಚಿ ಹೋಗಿದ್ದಾರೆ. 1983 ರಿಂದ ಅರಮನೆಯಲ್ಲಿ ಯಾರೂ ವಾಸಿಸುತ್ತಿಲ್ಲ . ಚಲನ ಚಿತ್ರದ ಶೂಟಿಂಗ್‌ಗೂ ಅರಮನೆ ಬಳಕೆಯಾಗಿದೆ. 1987ರಲ್ಲಿ ಜಿ.ವಿ. ಅಯ್ಯರ್ ಅವರ ಮಧ್ವಾಚಾರ್ಯ ಚಿತ್ರದ ಶೂಟಿಂಗ್‌ ನಡೆದದ್ದು ಇಲ್ಲೇ. ಚಿತ್ರೀಕರಣದ ನಂತರ ಅರಮನೆಯನ್ನು ಪೂರ್ವ ಸ್ಥಿತಿಯಲ್ಲೇ ಉಳಿಸುವುದಾಗಿ ನೀಡಿದ್ದ ವಚನವನ್ನು ಅಯ್ಯರ್ ಜಾರಿಗೆ ತರಲಿಲ್ಲ ಎಂದು ಅರಮನೆಯ ವಾರಸುದಾರರಲ್ಲಿ ಒಬ್ಬರಾದ ಸಂತೋಷ್‌ ಕುಮಾರ್ ಹೇಳುತ್ತಾರೆ.

ಜಿಲ್ಲೆಯಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು , ಮಣ್ಣಿನ ಅರಮನೆ ಕರಗುತ್ತಿದೆ. ಅರಮನೆಗೆ ತಕ್ಷಣವೇ ನಾಡಹಂಚು ತೊಡಿಸದಿದ್ದಲ್ಲಿ ಈಗಾಗಲೇ ಮಣ್ಣಾಗಿರುವ 11 ಮಣ್ಣಿನರಮನೆಗಳ ಜೊತೆಗೆ ಸುರಾಲು ಅರಮನೆಯೂ ಸೇರುತ್ತದೆ. ಅರಮನೆಯ ಮಾಡಿಗೆ ಅಂದಾಜು 2 ಲಕ್ಷ ಹಂಚುಗಳು ಅವಶ್ಯವಿದ್ದು , ಇದಕ್ಕೆ 10 ಲಕ್ಷ ರುಪಾಯಿಗಳು ಬೇಕು. ಸರ್ಕಾರ ಹಣ ಮಂಜೂರು ಮಾಡುವುದು ನಿಧಾನವಾದಷ್ಟೂ ಅರಮನೆ ಕರಗುವುದು ಮುಂದುವರಿಯುತ್ತದೆ.

ಕೃಪೆ - ಅಂತರ್ಜಾಲ

No comments:

Post a Comment